ಧಾರವಾಡ ಲೋಕಸಭಾ ಕ್ಷೇತ್ರ, ರಾಜ್ಯದ ಪ್ರತಿಷ್ಟಿತ ಕಣವಾಗಿ ಮಾರ್ಪಟ್ಟಿದೆ. ಎರಡನೇ ರಾಜಕೀಯ ಶಕ್ತಿ ಕೇಂದ್ರ ಎಂದೆ ಹೆಸರಾಗಿರುವ ಹುಬ್ಬಳ್ಳಿ ಧಾರವಾಡದಲ್ಲಿ ರಾಜಕೀಯ ಜೋರಾಗಿದೆ. ಪಕ್ಷ ಬಿಟ್ಟು ಹೋಗಿದ್ದ ಜಗದೀಶ ಶೆಟ್ಟರ ಮತ್ತೆ ಘರ ವಾಪಸಿಯಾಗಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಿರುವ ಬಿಜೆಪಿ, ಈಗಾಗಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭ ಮಾಡಿದೆ.
ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಧಾರವಾಡ ಜಿಲ್ಲೆಯಾದ್ಯಂತ ಸಂಸದ ಕ್ರೀಡೋತ್ಸವ ಕಾರ್ಯಕ್ರಮ ಹಮ್ಮಿಕೊಂಡು, ಕಣದಲ್ಲಿ ಧುಮುಕಿದ್ದಾರೆ. ಪ್ರತಿಷ್ಟಿತ ಕಣವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಕಮಲ ಪಡೆ ಝೆಂಕರಿಸುತ್ತಿದರೆ, ಮತ್ತೊಂದೆಡೆ ” ಕೈ ” ಪಡೆ ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿದೆ. 16 ಕ್ಕು ಹೆಚ್ಚು ಜನ ಕಾಂಗ್ರೇಸ್ ಟಿಕೇಟ್ ಪಡೆಯಲು ಅರ್ಜಿಹಾಕಿದ್ದು, ಅಭ್ಯರ್ಥಿ ಘೋಷಣೆ ಬಾಕಿ ಇದೆ. ಬಹುತೇಕ ಈ ಸಲವು ಬಿಜೆಪಿ ಇಂದ ಹಾಲಿ ಸಂಸದ ಪ್ರಲ್ಲಾದ ಜೋಶಿ ಸ್ಪರ್ಧಿಸಲು ಸಜ್ಜಾಗಿದ್ದಾರೆ.
ಕಾಂಗ್ರೇಸ್ ನಿಂದ ಸ್ಪರ್ಧಿಸಲು ಪಕ್ಷದಲ್ಲಿ ಪೈಪೋಟಿ ಹೆಚ್ಚಾಗಿದೆ. ರಜತ್ ಉಳ್ಳಾಗಡ್ಡಿಮಠ ಲೋಕಸಭಾ ಟಿಕೇಟ ಪಡೆಯಲು ಕಸರತ್ತು ನಡೆಸಿದ್ದು, ವೈಯುಕ್ತಿಕವಾಗಿ ಪ್ರಮುಖ ಮಠಾಧೀಶರನ್ನು ಭೇಟಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೇಸ್ಸಿನಲ್ಲಿರುವ ವೀರಶೈವ ಲಿಂಗಾಯತ ಮುಖಂಡರು, ಮಾಜಿ ವಿಧಾನ ಪರಿಷತ ಸದಸ್ಯ ಮೋಹನ ಲಿಂಬಿಕಾಯಿ ನೇತೃತ್ವದಲ್ಲಿ ಸಭೆ ನಡೆಸಿದ್ದು, ವೀರಶೈವ ಲಿಂಗಾಯತರಿಗೆ ಲೋಕಸಭಾ ಟಿಕೇಟ ನೀಡುವಂತೆ ಆಗ್ರಹ ಮಾಡುತ್ತಿದ್ದಾರೆ. ಮೋಹನ ಲಿಂಬಿಕಾಯಿಯವರ ಜೊತೆ ವಿಜಯ ಕುಲಕರ್ಣಿ, ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ, ಬಾಪುಗೌಡಾ ಪಾಟೀಲ, ಸೇರಿದಂತೆ ಅನೇಕರು ಕಾಂಗ್ರೇಸ್ ಹೈಕಮಾಂಡ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಧಾರವಾಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅನೀಲ ಪಾಟೀಲ ಸಹ ಪ್ರಭಲ ಆಕಾಂಕ್ಷಿಯಾಗಿದ್ದು, ಹಿರಿತನದ ಮೇಲೆ ಟಿಕೇಟ ಪಡೆಯಲು ಹೈಕಮಾಂಡ ಮೇಲೆ ಪ್ರಭಾವ ಹಾಕುತ್ತಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಅಬ್ಬರ ಜೋರಾಗಿದ್ದು, ಕಾಂಗ್ರೇಸ್, ತನ್ನ ಅಭ್ಯರ್ಥಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಆಂತರಿಕ ಸರ್ವೇಯಲ್ಲಿ ತೊಡಗಿದೆ.
” ಸುನೀಲ ಕನಗೋಳ ಟೀಮ್ ನಿಂದ ಸರ್ವೇ “
ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಾಂಗ್ರೇಸ್ ಸರ್ಕಾರ ರಚಿಸಲು ಕಾರಣರಾದ ಚುನಾವಣಾ ತಂತ್ರಗಾರ ಸುನೀಲ ಕನಗೋಳ ತಂಡ ಸರ್ವೇ ನಡೆಸುತ್ತಿದೆ. ಧಾರವಾಡ ಲೋಕಸಭಾ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸುನೀಲ್ ಕನಗೋಳ ತಂಡ ಜನರ ನಾಡಿ ಮಿಡಿತ ನಡೆಸುತ್ತಿದೆ. ಹಿರಿಯ ವರದಿಗಾರರನ್ನು ಸಂಪರ್ಕಿಸುತ್ತಿರುವ ಸುನೀಲ ಕನಗೋಳು ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕಾಂಗ್ರೇಸ್ ಟಿಕೇಟ ಅಹಿಂದ ವರ್ಗಕ್ಕೆ ಕೊಡಬೇಕೋ, ಅಥವಾ ವೀರಶೈವ ಲಿಂಗಾಯತರಿಗೆ ಕೊಡಬೇಕು ಅನ್ನೋದರ ಬಗ್ಗೆಯೂ ಮಾಹಿತಿ ಸಂಗ್ರಹ ಮಾಡುತ್ತಿದೆ. ಈ ತಂಡ ಕಳೆದ ಒಂದು ವಾರದಿಂದ ಧಾರವಾಡ ಲೋಕಸಭಾ ವ್ಯಾಪ್ತಿಯ ಹಳ್ಳಿ ಹಳ್ಳಿಗೆ ಹೋಗುತ್ತಿದೆ. ಕಾಂಗ್ರೇಸ್ಸಿನ ಗ್ಯಾರೆಂಟಿ ಯೋಜನೆಗಳ ಸಾಧಕ ಬಾಧಕದ ಬಗ್ಗೆ ಜನಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಿದೆ.





