ಬಳ್ಳಾರಿಯಲ್ಲಿ ಬ್ಯಾನರ್ ರಾಜಕೀಯ, ಘರ್ಷಣೆಗೆ ತಿರುಗಿದ್ದು, ಗುಂಡಿನ ಶಬ್ದಗಳು ಮೊಳಗಿವೆ. ಈ ಘರ್ಷಣೆಯಲ್ಲಿ ರಾಜಶೇಖರ ಎಂಬ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದಾನೆ.
ಬಳ್ಳಾರಿಯ ಹಾವಂಬಾವಿ ನಗರದಲ್ಲಿ ಬ್ಯಾನರ್ಗಳಿಗೆ ಸಂಬಂಧಿಸಿದ ವಿವಾದ ಬುಧವಾರ ತಡರಾತ್ರಿ ಹಿಂಸಾಚಾರಕ್ಕೆ ತಿರುಗಿದೆ.
ಜನೇವರಿ 3 ರಂದು ನಡೆಯಲಿರುವ ವಾಲ್ಮೀಕಿ ಪ್ರತಿಮೆ ಉದ್ಘಾಟನೆಗೂ ಮುನ್ನ ಕಲ್ಲು ತೂರಾಟ ಮತ್ತು ಗುಂಡಿನ ದಾಳಿಯಿಂದ ಬಳ್ಳಾರಿಯಲ್ಲಿ ನಡೆದ ಈ ಘರ್ಷಣೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ಗಣಿ ಉದ್ಯಮಿ ಮತ್ತು ಬಿಜೆಪಿ ಶಾಸಕ ಜಿ. ಜನಾರ್ದನರೆಡ್ಡಿ ಅವರ ನಿವಾಸದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ಗಳನ್ನು ಅಳವಡಿಸಲು ಪ್ರಯತ್ನಿಸಿದಾಗ ಗಲಾಟೆ ಆರಂಭವಾಯಿತು. ಜನಾರ್ದನ ರೆಡ್ಡಿ ಬೆಂಬಲಿಗರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ.
ಘರ್ಷಣೆಯ ಸಮಯದಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಜೀವವನ್ನು ಹಿಂಸಾಚಾರ ಬಲಿ ತೆಗೆದುಕೊಂಡಿದೆ.
ಜನಾರ್ದನ ರೆಡ್ಡಿ ಈ ದಾಳಿಯು ತನ್ನ ಮೇಲೆ ನಡೆದ ಹತ್ಯೆಯ ಪ್ರಯತ್ನ ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ಭರತರೆಡ್ಡಿ ಅವರ ಸಹಚರರೊಂದಿಗೆ ಸಂಪರ್ಕ ಹೊಂದಿದ್ದ ಬಂದೂಕುಧಾರಿಗಳು ತಮ್ಮ ಮನೆ ಸಮೀಪಿಸುತ್ತಿದ್ದಂತೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಶಾಸಕ ನರ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಅವರ ಬೆಂಬಲಿಗರು ವಾಲ್ಮೀಕಿ ಕಾರ್ಯಕ್ರಮವನ್ನು ಹಳಿತಪ್ಪಿಸಲು ಹಿಂಸಾಚಾರ ನಡೆಸಿದ್ದಾರೆ. ಎಂದು ಆರೋಪಿಸಿದ್ದಾರೆ. “ಅವರು ಒಂದು ತಿಂಗಳಿನಿಂದ ಈ ಕಾರ್ಯಕ್ರಮವನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು, ಈಗ ಅವರು ಕೊಲೆಗೆ ಇಳಿದಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ತಕ್ಷಣ ಬಂಧಿಸಬೇಕು” ಎಂದು ಭರತ ರೆಡ್ಡಿ ಆರೋಪಿಸಿದ್ದಾರೆ.
ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಲ್ಲು ತೂರಾಟ ನಡೆಸಿದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಲಾಗಿದೆ.
ಬಳ್ಳಾರಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಳ್ಳಾರಿಯಲ್ಲಿ ಪೊಲೀಸ್ ಸರ್ಫಗಾವಲು ಹಾಕಲಾಗಿದೆ.





