ಧಾರವಾಡದಲ್ಲಿ ನಿನ್ನೆ ನಡೆದ ಮುಸ್ಲಿಮ್ ಯುವತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದಾರೆ.
ಪ್ಯಾರಾ ಮೆಡಿಕಲ್ ಮುಗಿಸಿ ಉದ್ಯೋಗದ ನಿರೀಕ್ಷೇಯಲ್ಲಿದ್ದ ಯುವತಿ ಜಾಕಿಯಾ ಮುಲ್ಲಾ ಹಾಗೂ ಆಕೆಯನ್ನು ಕೊಲೆ ಮಾಡಿರುವ ಸಾಬೀರ ಮುಲ್ಲಾ ನಡುವೆ ಮದುವೆ ಮಾತುಕತೆ ಮುಗಿದಿತ್ತು.
ಮುಂದಿನ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಸಾಬೀರ ಹಾಗೂ ಜಾಕಿಯಾ ಮುಲ್ಲಾ ಇಬ್ಬರು ಒಂದೇ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಮಾಡುತ್ತಿದ್ದರಿಂದ ಇಬ್ಬರು ಹತ್ತಿರವಾಗಿದ್ದರು ಎನ್ನಲಾಗಿದೆ.
ಅತ್ತ ಜಾಕಿಯಾ ಮುಲ್ಲಾ, ತನ್ನನ್ನು ಮದುವೆ ಮಾಡಿಕೊಳ್ಳುವ ಹುಡುಗ ನಾಲ್ಕೈದು ಹುಡುಗಿಯರ ಜೊತೆ ಸಲುಗೆ ಹೊಂದಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡಿದ್ದಳು ಎನ್ನಲಾಗಿದೆ.
ಇದೆಲ್ಲದರ ಪರಿಣಾಮ, ಜಾಕಿಯಾ ಮುಲ್ಲಾ ಸಾಬೀರ ಜೊತೆ ಮದುವೆ ಆಗಲು ನಿರಾಕರಿಸಲು ಆರಂಭಿಸಿದ್ದಳು. ಇದನ್ನು ಅರಿತ ಸಾಬೀರ, ಮಾತನಾಡಬೇಕಿದೆ ಬಾ ಎಂದು ಆಕೆಯನ್ನು ನಿರ್ಜನ್ ಪ್ರದೇಶಕ್ಕೆ ಕರೆದೋಯ್ದು ಕುತ್ತಿಗೆ ಹಿಚುಕಿ ಸಾಯಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೈಡ್ರಾಮಾ ಮಾಡಿದ್ದ ಸಾಬೀರ್
ಕೊಲೆಗಾರ ಸಾಬೀರ್ ಎಂತಹ ಕಿರಾತಕ ಅಂದರೆ, ಜಾಕಿಯಾಳನ್ನು ಕೊಲೆ ಮಾಡಿದ ಬಳಿಕ, ಜಾಕಿಯಾ ನಾಪತ್ತೆಯಾಗಿದ್ದಾಳೆ ಆಕೆಯನ್ನು ಹುಡುಕಿಕೊಡಿ ಎಂದು ಧಾರವಾಡ ಶಹರ ಠಾಣೆಗೆ ಹೋಗಿದ್ದ.
ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದ್ದ ಶಹರ ಠಾಣೆ ಪೊಲೀಸರಿಗೆ, ಹುಡುಗಿ ವಿನಯ ಡೇರಿ ಬಳಿ ಹಾಯ್ದು ಹೋಗುವ ರಸ್ತೆಯಲ್ಲಿದ್ದಾಳೆ ಎಂದು ಗೊತ್ತಾಗಿತ್ತು. ಅದೇ ದಿನ ರಾತ್ರಿ ಸಾಬೀರ್ ಸಹ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಎನ್ನಲಾಗಿದೆ.
ಮರುದಿನ ಅಂದರೆ ನಿನ್ನೆ ಬೆಳಿಗ್ಗೆ ಜಾಕಿಯಾ ಶವ ಪತ್ತೆಯಾದ ನಂತರ ಅಲ್ಲಿಗೆ ಬಂದಿದ್ದ ಸಾಬೀರ್, ನಾನು ಕೊಲೆ ಮಾಡಿದ ವಿಷಯ ಯಾರಿಗೂ ಗೊತ್ತಾಗಲ್ಲ ಅಂತಾ ತಿಳಿದಿದ್ದ.
ಧಾರವಾಡ ಗ್ರಾಮೀಣ ಠಾಣೆಯ ದಕ್ಷ ಪೊಲೀಸ್ ಇನ್ಸಪೆಕ್ಟರ್ ಕಮತಗಿಯವರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ಕಹಾನಿ ಹೊರಬಿದ್ದಿದೆ.





