ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅನುವು ಮಾಡಿಕೊಡಬೇಕೆಂದು ಮಾಜಿ ಸಿನೆಟ್ ಸದಸ್ಯ, ಪಕ್ಷದ ಮುಖಂಡ ಶಿವಶಂಕರ ಕಲ್ಲೂರ ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ. ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಜೆ ಪಿ ಭವನದಲ್ಲಿ ಜರುಗಿದ ರಾಜ್ಯ ಮಟ್ಟದ ಪಕ್ಷದ ಸಭೆಯಲ್ಲಿ ಅವರು ತಮ್ಮ ಮನವಿ ನೀಡಿದ್ದಾರೆ.
ತಾವು ಈಗಾಗಲೇ ಕ್ಷೇತ್ರದ ತುಂಬೆಲ್ಲ ಪ್ರವಾಸ ಮಾಡಿದ್ದು ಪದವೀಧರರು ತಮ್ಮ ಆಯ್ಕೆಗೆ ಉತ್ಸುಕತೆ ತೋರಿದ್ದಾರೆ. ಜೊತೆಗೆ ಪಶ್ಚಿಮ ಪದವೀಧರ ಕ್ಷೇತ್ರದ ಕಳೆದ ಚುನಾವಣೆಯಲ್ಲಿ ತಮಗಾಗಿರುವ ಅನ್ಯಾಯವನ್ನು ಸರಿಪಡಿಸುವ ಮೂಲಕ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ತಮಗೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಆಲ್ಕೋಡ ಹನುಮಂತಪ್ಪ, ಕೆ ಎನ್ ಗಡ್ಡಿ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ಜೆಡಿಎಸ್ ಧಾರವಾಡ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಬಿ ಬಿ ಗಂಗಾಧರಮಠ, ಮಹಾನಗರ ಅಧ್ಯಕ್ಷ ಗುರುರಾಜ ಹುಣಸಿಮರದ, ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣವರ, ಗದಗ ಜಿಲ್ಲಾಧ್ಯಕ್ಷ ಮಕ್ಳುಮಸಾಬ್ ಮುಧೋಳ ಇದ್ದರು.
ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಸಂಘಟನಾ ಚತುರ ಶಿವಶಂಕರ ಕಲ್ಲೂರ ಅವರಿಗೆ ಟಿಕೆಟ್ ನೀಡಲು ಅವರ ಹೆಸರನ್ನು ಪ್ರಥಮ ಪ್ರಾಶ್ಯಸ್ತದಲ್ಲಿ ಪರಿಗಣಿಸಲು ಒಮ್ಮತದಿಂದ ಶಿಫಾರಸು ಮಾಡಲಾಗಿದೆ ಅವರಿಗೆ ಟಿಕೆಟ್ ನೀಡುವದರಿಂದ ಪಕ್ಷದ ಸಂಘಟನೆಗೆ ಈ ಭಾಗದಲ್ಲಿ ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕುಮಾರಸ್ವಾಮಿ ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಲ್ಲೂರ ಅವರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ವರಿಷ್ಠರೊಂದಿಗೆ ಮಾತನಾಡುವುದಾಗಿ, ಈ ಕುರಿತು ಪಕ್ಷದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ಅಭಯ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಜಿ ಎನ್ ತೋಟದ, ಪ್ರಕಾಶ ಅಂಗಡಿ, ವೀರೇಶ ಶಾನುಭೋಗರ, ಪಕ್ಕೀರಗೌಡ ದೊಡ್ಡಮನಿ ಮತ್ತಿತರರು ಹಾಜರಿದ್ದರು





