ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಎಲ್ಐಸಿ ಅಭಿವೃದ್ಧಿ ಅಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿರುವ, ಎ ಎಂ ಖಾಜಿ ಅವರು ಬದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಸಂಜೀವ ನೀರಲಗಿ ಖಾಜಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಖಾಜಿಯವರಿಗೆ ಶಾಲು ಹೊದಿಸಿ, ಪಕ್ಷಕ್ಕೆ ಬರಮಾಡಿಕೊಂಡರು.
1994ರಲ್ಲಿ ನವಲಗುಂದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖಾಜಿ ಅವರು ಸುಮಾರು ಏಳು ಸಾವಿರದಷ್ಟು ಮತಗಳನ್ನು ಪಡೆದು, ಎಲ್ಲರ ಗಮನ ಸೆಳೆದಿದ್ದರು.
ಅಣ್ಣಿಗೇರಿಯಲ್ಲಿ ಭಾವೈಕ್ಯತೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನಾನುರಾಗಿಯಾಗಿರುವ, ಖಾಜಿ ಅವರು ಹಾವೇರಿ ಜಿಲ್ಲೆಯಲ್ಲಿ ಅದೇ ಪ್ರೀತಿ ಸಂಪಾದಿಸುವ ಮೂಲಕ ಕಣ್ಮಣಿಯಾಗಿದ್ದಾರೆ.
ಉತ್ತಮ ಭಾಷಣಕಾರರಾಗಿರುವ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ.
ಖಾಜಿಯವರು ಕಾಂಗ್ರೇಸ್ ಸೇರುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಾವೇರಿ ಜಿಲ್ಲೆಯ ಡಾ ಎ ಎಂ ಸೌದಾಗರ, ಅಬ್ದುಲ್ ಮುನಾಫ್ ಎರೆಶಿಮಿ, ಅಬ್ದುಲ್ ಮಜೀದ್ ಮುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.




