ಧಾರವಾಡ ನಿನ್ನೆ ಮತ್ತೊಂದು ಕೊಲೆಗೆ ಸಾಕ್ಷಿಯಾಗಿದೆ. ಯುವ ಕಾಂಗ್ರೇಸ್ಸಿನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಧಾರವಾಡದ ಮಾಳಾಪುರದ ಹಾಶ್ಮಿ ನಗರದ 4 ನೇ ಕ್ರಾಸ್ ನಲ್ಲಿರುವ ಫೈರೋಜ್ ಮನೆಗೆ ನುಗ್ಗಿದ ನಾಲ್ವರು ಮನಸೋ ಇಚ್ಛೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ತನಗೆ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡುವಂತೆ ಫೈರೋಜ್, 6 ತಿಂಗಳ ಹಿಂದೆ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಪತ್ರ ಕೊಟ್ಟು ಬಂದಿದ್ದರು.
ತನ್ನ ಜೊತೆ ಯುವ ಕಾಂಗ್ರೇಸ್ ಮುಖಂಡ ಅಬ್ದುಲ್ ದೇಸಾಯಿಗೂ ಸಹ ಜೀವ ಬೆದರಿಕೆ ಇದ್ದು, ರಕ್ಷಣೆ ಕೊಡುವಂತೆ ಗೃಹ ಸಚಿವರಿಗೆ ಮನವಿ ಮಾಡಿ ಬಂದಿದ್ದರು.
ಪೊಲೀಸ್ ಇಲಾಖೆ ಈ ವಿಷಯವನ್ನು ಲೇಟಾಗಿಯೋ ಅಥವಾ ಲೈಟ್ ಆಗಿಯೋ, ತೆಗೆದುಕೊಂಡ ಪರಿಣಾಮ ಈ ಘಟನೆ ನಡೆದಿದೆ ಎಂದು ಅಬ್ದುಲ್ ದೇಸಾಯಿ ದೂರಿದ್ದಾರೆ.
ನಿವೃತ್ತರ ಸ್ವರ್ಗ ಧಾರವಾಡದಲ್ಲಿ ಕೆಲ ಕ್ರಿಮಿಗಳು ನಗರವನ್ನು ನರಕದಂತೆ ಮಾಡಿದ್ದು, ನಿನ್ನೆಯಿಂದ ಜನ ಧಾರವಾಡ ಮೊದಲಿನಂತೆ ಸುರಕ್ಷಿತವಾಗಿ ಉಳಿದಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಗೃಹ ಸಚಿವರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿ ಬಂದ ಕೆಲವೇ ತಿಂಗಳುಗಳಲ್ಲಿ ಯುವ ಕಾಂಗ್ರೇಸ್ ಮುಖಂಡನ ಹೆಣ ಬಿದ್ದಿದೆ.
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೇಸ್ ಸರ್ಕಾರದಲ್ಲಿ ಕಾಂಗ್ರೇಸ್ ಮುಖಂಡರಿಗೆ ರಕ್ಷಣೆ ಇರದಿರುವದು ಆಕ್ರೋಶಕ್ಕೆ ಕಾರಣವಾಗಿದೆ.




