ಧಾರವಾಡದ ತಡಸಿನಕೊಪ್ಪ ಸರಹದ್ಧಿನಲ್ಲಿರುವ ನೂರು ಏಕರೆ ಜಮೀನಿಗೆ ಸಂಬಂದಿಸಿದಂತೆ ಸುವರ್ಣ ನ್ಯೂಸ್ ನಲ್ಲಿ ಬಂದ ವರದಿಗೆ ಜಿಲ್ಲಾಳಿತ ಎಚ್ಚೆತ್ತುಕೊಂಡಿದೆ.
ಪ್ರಕರಣದ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಸ್ನೇಹಲ್ ರಾಯಮಾನೆಯವರು ಅಪರ ಜಿಲ್ಲಾಧಿಕಾರಿ ಸಿ ಡಿ ಗೀತಾ ಅವರ ನೇತ್ರತ್ವದಲ್ಲಿ ಸಮಿತಿ ನೇಮಕ ಮಾಡಿದ್ದಾರೆ.
ಬುಧವಾರದ ಒಳಗೆ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಆಕ್ರಮದ ಬಗ್ಗೆ ಸಮಗ್ರ ವಿವರ ತರಿಸಿಕೊಳ್ಳುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದು, ಸಿ ಡಿ ಗೀತಾ ಅವರು, ಧಾಖಲೆಯೊಂದಿಗೆ ಉತ್ತರಿಸುವಂತೆ ಉಪ ವಿಭಾಗಾಧಿಕಾರಿ ಶಾಲಂ ಹುಸೇನ್ ಅವರಿಗೆ ನೋಟೀಸ್ ನೀಡಿದ್ದಾರೆ.
ಮತ್ತೊಂದೆಡೆ ಧಾರವಾಡ ತಹಸೀಲ್ದಾರ್ ದೊಡ್ಡಪ್ಪ ಹೂಗಾರ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ರ ಅಪ್ತ ಸಹಾಯಕರಿಗೆ ಇಲ್ಲಿಂದ ವರ್ಗ ಮಾಡಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಪ್ರಕರಣದ ತನಿಖೆ ನಡೆಸಿ, ಅದರಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ಮೇಲೆ FIR ಧಾಖಲು ಮಾಡಬೇಕು ಅನ್ನೋದು ಸಾರ್ವಜನಿಕರ ಕೂಗಾಗಿದೆ.
ನೂರು ಏಕರೆ ಭೂಮಿಗೆ ಸಂಬಂಧಿಸಿದಂತೆ ಸುವರ್ಣ ನ್ಯೂಸ್, ನಿರಂತರ ಸುದ್ದಿ ಪ್ರಕಟ ಮಾಡುತ್ತಿದ್ದು, ಬಹುಕೋಟಿ ಹಗರಣವನ್ನು ಬಯಲಿಗೆಳೆದಿದೆ.
ಸುವರ್ಣ ನ್ಯೂಸ್ ಬಿತ್ತರಿಸಿದ ಸುದ್ದಿಯಿಂದ ತಲಾಠಿಯಿಂದ ಹಿಡಿದು ಉಪ ವಿಭಾಗಾಧಿಕಾರಿಗಳವರೆಗೆ ತಲ್ಲಣ ಸೃಷ್ಟಿಯಾಗಿದ್ದು, ಹೇಗಾದರೂ ಬಚಾವ್ ಆಗಲು ತೆರೆಮರೆಯ ಕಸರತ್ತು ನಡೆಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಹಿಂದೆಂದೂ ನಡೆಯದ ದೊಡ್ಡ ಹಗರಣವನ್ನು ಸುವರ್ಣ ನ್ಯೂಸ್ ಹೊರಹಾಕಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಸಹ ಜಿಲ್ಲೆಯಲ್ಲಿ ಇಂತಹ ಕ್ರಿಮಿಗಳ ಬಗ್ಗೆ ಎಚ್ಚರವಹಿಸಬೇಕಿದೆ.





