ಫಕೀರ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ಸ್ವಾಮೀಜಿಗಳ ಸಭೆ ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದು, ಸಂಚಲನ ಮೂಡಿಸಿದೆ.
ಸಭೆಯ ಬಳಿಕ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನು ಕೊಟ್ಟಿದ್ದು, ಮಠಾಧೀಶರ ಸಭೆಯಲ್ಲಿ ಚರ್ಚಿಸಿ ಐದು ಸ್ಪಷ್ಟವಾದ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಧಾರ್ಮಿಕವಾಗಿ ವೀರಶೈವ ಲಿಂಗಾಯತರ ಅವನತಿ ಆಗುತ್ತಿದೆ ಅನ್ನೋ ಚರ್ಚೆ ನಡೆದಿದೆ. ಸಾಮಾಜಿಕ ಸೌಲಭ್ಯಗಳಿಂದ ಸಮಾಜ ವಂಚಿತವಾಗಿದೆ ಅನ್ನೋ ಚರ್ಚೆ ಮಾಡಲಾಗಿದೆ ಎಂದು ಹೇಳಲಾಗಿದೆ. ಸಮಾಜದ ಮುಖಂಡರಿಗೆ ಸಾಮಾಜಿಕ, ರಾಜಕೀಯ ಪೆಟ್ಟು ಬಿದ್ದಾಗ ಸ್ವಾಮೀಜಿಗಳು ಮಾತಾಡಬೇಕು ಅಂತಾ ನಿರ್ಣಯ ಮಾಡಲಾಗಿದ್ದು, ಉತ್ತರ ಭಾರತದ ಮಾದರಿಯಲ್ಲಿ, ದಕ್ಷಿಣ ಭಾರತದ ಸ್ವಾಮೀಜಿಗಳು ಚುನಾವಣೆಗೆ ನಿಲ್ಲಬೇಕು ಅಂತಾ ತೀರ್ಮಾನ ಮಾಡಲಾಗಿದೆ.
ಪ್ರಲ್ಹಾದ್ ಜೋಶಿಯವರ ಕ್ಷೇತ್ರ ಬದಲಾವಣೆ ಮಾಡಬೇಕು
ಮಾಜಿ ಸಿಎಮ್ಗೆ ಬೇರೆ ಕ್ಷೇತ್ರಕ್ಕೆ ಕೊಟ್ಟಂತೆ, ಕೇಂದ್ರ ಸಚಿವರಿಗೂ ಕ್ಷೇತ್ರ ಬದಲಾವಣೆ ಮಾಡಬೇಕು
ಈ ಕುರಿತು ಸ್ವಾಮೀಜಿಗಳ ನಿಯೋಗದಿಂದ ಬಿಜೆಪಿ ವರಿಷ್ಠರಿಗೆ ಮನವಿ ಸಲ್ಲಿಸಲಾಗುವುದು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ. ಲಿಂಗಾಯತರ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ, ಬ್ರಾಹ್ಮಣರು ಪ್ರಭಲವಾಗಿರುವ ಕ್ಷೇತ್ರದಲ್ಲಿ ಲಿಂಗಾಯತನ್ನು ನಿಲ್ಲಿಸಿ ಗೆಲ್ಲಿಸಬೇಕು.
ಪ್ರಲ್ಹಾದ್ ಜೋಶಿಯವರು ಸೇಡಿನ ರಾಜಕೀಯ ಮಾಡಿದ್ದಾರೆ ಅವರಿಂದಾಗಿ ಬೇರೆಬೇರೆ ವರ್ಗದ ಜನರು ತುಳಿತಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿದರು.
ಪ್ರಲ್ಲಾದ ಜೋಶಿ, ಐಟಿ, ಇಡಿ ಬೆದರಿಕೆ ಹಾಕಿ ದಾಸ್ಯತ್ವಕ್ಕೆ ದಾರಿ ಮಾಡಿದ್ದಾರೆ
ಪ್ರಲ್ಲಾದ ಜೋಶಿ ಮೇಲೆ ಕಿಡಿ ಕಾರಿದ ದಿಂಗಾಲೇಶ್ವರ ಸ್ವಾಮೀಜಿ, ಜೋಶಿ ಹಿಂಬಾಲಕರನ್ನು ಎಲ್ಲೆಡೆ ಇಟ್ಟು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಸಂಸದರಿಗೆ ಫೋನ್ ಮಾಡಿದರೆ ಲಿಂಗಾಯತ ಮುಖಂಡರಿಗೆ ಫೋನ್ ಮಾಡಿ ಅಂತಾರೆ. ಪ್ರಲ್ಹಾದ್ ಜೋಶಿಯವರ ಸಹೋದರ ಗೋವಿಂದ ಜೋಶಿಯವರು ನನ್ನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಲ್ಹಾದ್ ಜೋಶಿಯವರು ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ತೋರಿಸಿದ್ದಾರೆ. ಮಗಳ ಮದುವೆಗೆ ಹೋದರೆ ಅವಮಾನಿಸಿ ಕಳಿಸಿದ್ದಾರೆ. ಸ್ವಾಮೀಜಿಗಳಿಗೆ ಎರಡು ಸಾವಿರ ಕೊಟ್ಟು ಕಳಿಸಿದ್ದಾರೆ. ಹಣ, ಅಧಿಕಾರದ ಮದ ಬಂದಿದೆ. ಅವರನ್ನು ಕೆಳಗೆ ಇಳಿಸಬೇಕು ಅನ್ನೋ ನಿರ್ಣಯಕ್ಕೆ ಬಂದಿದ್ದಾರೆ. ಮಠಾಧೀಶರು ಯಾವ ಪಕ್ಷದ ವಿರೋಧಿಗಳೂ ಅಲ್ಲ, ಅಭಿಮಾನಿಗಳೂ ಅಲ್ಲ.
ಪ್ರಲ್ಹಾದ್ ಜೋಶಿಯ ವ್ಯಕ್ತಿತ್ವದ ಕಾರಣ ಅವರನ್ನು ಕೆಳಗೆ ಇಳಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಪ್ರಲ್ಹಾದ್ ಜೋಶಿಯವರನ್ನು ಮಾರ್ಚ್ 31ರೊಳಗೆ ಬೇರೆ ಕ್ಷೇತ್ರಕ್ಕೆ ಕಳಿಸಬೇಕು. ಬಿಜೆಪಿ ಹೈಕಮಾಂಡ್ 31ರೊಳಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಗಡುವು ನೀಡಿದ್ದಾರೆ ಇಲ್ಲದಿದ್ದರೆ ಎಪ್ರಿಲ್ 2ರಂದು ಸ್ವಾಮೀಜಿಗಳು ಮತ್ತೆ ಸೇರಿ ನಮ್ಮದೇ ಆದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
ಯಡಿಯೂರಪ್ಪರನ್ನು ಸಿಎಮ್ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಲ್ಹಾದ್ ಜೋಶಿ. ತಾವೇ ಸಿಎಮ್ ಆಗಬೇಕೆಂದು ಪ್ರಲ್ಹಾದ್ ಜೋಶಿ ಜಾಕೆಟ್ ಹೊಲಿಸಿದ್ರು. ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು. ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಎರಡನೆಯ ತಾರೀಖಿನ ನಂತರ ಕಾಯ್ದು ನೋಡಿ ಎಂದರು. ಸಭೆಯ ನಿರ್ಣಯ ಹೇಳುತ್ತಿದ್ದಂತೆ ಉಳಿದ ಸ್ವಾಮೀಜಿಗಳು ಕೈ ಎತ್ತಿ ದಿಂಗಾಲೇಶ್ವರ ಸ್ವಾಮೀಜಿಗೆ ಬೆಂಬಲ ಸೂಚಿಸಿದರು.





