ಧಾರವಾಡ, ವಿವಿಧ ಬಿರುದಾವಳಿಗಳನ್ನು ಹೊಂದಿದ ನಗರ. ತಣ್ಣನೆಯ ಗಾಳಿ, ಹಿಂದೂಸ್ಥಾನಿ ಸಂಗೀತದ ಕಂಪು, ನಿವೃತ್ತರ ಪಾಲಿಗೆ ಸ್ವರ್ಗದ ಅನುಭವ ನೀಡುವ ಧಾರವಾಡದಲ್ಲಿ ಕ್ರೈಂ ಲೋಕ ಅನಾವರಣಗೊಳ್ಳುತ್ತಿದೆ.
ಇತ್ತೀಚಿಗಂತೂ ಅಪರಾಧಗಳು ಧಾರವಾಡ ಜನರಲ್ಲಿ ಆತಂಕ ಮತ್ತು ಭಯ ಹುಟ್ಟಿಸಿವೆ. ಸರಗಳ್ಳತನ, ಮನೆಗಳ್ಳತನ, ಅಲ್ಲಲ್ಲಿ ಸಣ್ಣ ಪುಟ್ಟ ಘಟನೆಗಳು ಸರ್ವೆ ಸಾಮಾನ್ಯವಾಗಿದ್ದವು.
ಸಾಹಿತ್ಯ, ಸಂಗೀತ, ಶಿಕ್ಷಣ, ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿರುವ ಧಾರವಾಡದಲ್ಲಿ ಕೊಲೆ ಸುಲಿಗೆಯಂತಹ ಘಟನೆಗಳು ಆತಂಕಕ್ಕೆ ಕಾರಣವಾಗಿವೆ.
ನಿಲ್ಲದ ಅಪರಾಧಗಳು
ಧಾರವಾಡ ಇದೀಗ ಮೊದಲಿನಂತಿಲ್ಲ. ಎಮ್ 80, ಎಂಬಾತನ ಕೊಲೆಯಿಂದ ಹಿಡಿದು, ಜಿದ್ದಿ ಮಲಿಕ್, ಹುಸೇನ್, ಫ್ರೂಟ್ ಇರ್ಫಾನ್, ಮಮ್ಮದ ಕುಡಚಿ, ಮರಾಠಾ ಕಾಲನಿಯಲ್ಲಿ ನಿಂಗಪ್ಪ ಹಡಪದ ಎಂಬ ವೃದ್ಧನ ಕೊಲೆ, ತೀರಾ ಇತ್ತೀಚಿಗೆ ಫೈರೋಜ್ ಪಠಾಣ ಕೊಲೆ ನಡೆದು ಹೋಗಿದೆ.
ಈ ಕೊಲೆಗಳು ಹಫ್ತಾ ವಸೂಲಿ ಹಾಗೂ ಧಾರವಾಡದಲ್ಲಿ ಡಾನ್ ಗಿರಿ ಪಟ್ಟ ಕಟ್ಟಿಕೊಳ್ಳಲು ನಡೆದ ಕೊಲೆಗಳಾಗಿವೆ.
ಧಾರವಾಡದಲ್ಲಿ ನಡೆದ ಆ ಎರಡು ಕೊಲೆಗಳು ಮಾತ್ರ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದವು. ಒಂದು ಕೊಲೆ ಸೈದ್ದಾಂತಿಕ ಭಿನ್ನಾಭಿಪ್ರಾಯದಿಂದ ನಡೆದ ಕೊಲೆಯಾದರೆ, ಮತ್ತೊಂದು ಕೊಲೆಗೆ ರಾಜಕೀಯ ಬಣ್ಣ ಬಳೆಯಲಾಗಿತ್ತು.
ಅಗಸ್ಟ್ 30, 2015 ರಂದು ನಡೆದ ಹಿರಿಯ ಸಂಶೋದಕ, ಎಮ್ ಎಮ್ ಕಲಬುರ್ಗಿವರ ಕೊಲೆ ಹಾಗೂ ಜೂನ್ 16, 2016 ರಂದು ನಡೆದ ಯೋಗೀಶಗೌಡ ಗೌಡರ ಕೊಲೆ, ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದ್ದವು.
ಈ ಪೈಕಿ ಎಮ್ ಎಮ್ ಕಲಬುರ್ಗಿಯವರ ಕೊಲೆ, ರಾಜಕೀಯ ಲಾಭ ತಂದು ಕೊಡುವದಿಲ್ಲ ಅನ್ನೋ ಕಾರಣಕ್ಕೋ ಏನೋ ಇಲ್ಲಿಯವರೆಗೆ ಆ ಕೊಲೆಗೆ ನ್ಯಾಯ ಸಿಕ್ಕಿಲ್ಲ. ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಕಿರುಚಾಡಿದ್ದ ಹೋರಾಟಗಾರರು, ಸಂಘಟನೆಗಳು ಹಾಗೂ ರಾಜಕಾರಣಿಗಳು ಕಲಬುರ್ಗಿಯವರ ಕೊಲೆ ಪ್ರಕರಣಕ್ಕೆ ನ್ಯಾಯ ಒದಗಿಸುವ ಕೆಲಸ ಇನ್ನೂವರೆಗೆ ಮಾಡುತ್ತಿಲ್ಲ.
ಪೊಲೀಸ್ ಠಾಣೆಗಳು ಹಾಗೂ ರೌಡಿಗಳು
ಕೆಲ ವರ್ಷಗಳ ಹಿಂದೆ ಧಾರವಾಡದ ಉಪನಗರ, ವಿದ್ಯಾಗಿರಿ, ಶಹರ ಠಾಣೆಗಳ ವ್ಯಾಪ್ತಿಯಲ್ಲಿ ರೌಡಿಗಳ ಹಾವಳಿ ಮೀತಿ ಮೀರಿತ್ತು. ಭೂ ಮಾಫಿಯಾದವರಂತೂ ಠಾಣೆಗಳನ್ನೇ ಅಡ್ಡೆಯಂತೆ ಮಾಡಿಕೊಂಡಿದ್ದರು. ಜಮೀನು ಕಳೆದುಕೊಂಡು ಮೋಸಕ್ಕೆ ಹೋದವರು, ಠಾಣೆಗೆ ಬರಲು ಹೆದರುವಂತಹ ಪರಿಸ್ಥಿತಿ ಎದುರಾಗಿತ್ತು.
ಭಯ ಹುಟ್ಟಿಸುತ್ತಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಗಳು
ಧಾರವಾಡದಲ್ಲಿ ಒಂದರ ಮೇಲೊಂದರಂತೆ ನಡೆದ ಕೊಲೆಗಳು, ಭೀತಿ ಹುಟ್ಟಿಸಿವೆ. ಇನ್ಸ್ಟಾಗ್ರಾಮ್ ನಲ್ಲಂತೂ ಕೆಲ ಮರಿ ಪುಡಾರಿಗಳು ಬಾಸ್, ಡಾನ್, ಸರ್ಕಾರ್, ಸಿಂಹ, ಹುಲಿ, ಚಿರತೆ, ಎಂಬ ಉಪನಾಮೆ ಇಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಪೊಲೀಸರು ಅಂತಹರನ್ನು ಮೊದಲು ಹೆಡೆಮುರಿಗೆ ಕಟ್ಟಬೇಕಾಗಿದೆ.
ಧಾರವಾಡದಲ್ಲಿ ಸುಪಾರಿ ಕಿಲ್ಲರ್ಸ್
ಧಾರವಾಡಕ್ಕೂ ಸುಪಾರಿ ಕಿಲ್ಲರ್ಸ್ ಸಂಸ್ಕೃತಿ ಕಾಲಿಟ್ಟಿದೆ. ತೀರಾ ಮೊನ್ನೆ ಮುಂಡಗೋಡದಲ್ಲಿ ಜಮೀರ್ ಎಂಬಾತನ ಕೊಲೆಯಲ್ಲಿ ಧಾರವಾಡದ ಮೂವರಿಗೆ ಜಮೀರ್ ಕೊಲೆಗೆ ಸುಪಾರಿ ಕೊಟ್ಟಿರುವ ಭಯಾನಕ ಸಂಗತಿಯನ್ನು ಕಾರವಾರ ಜಿಲ್ಹಾ ಪೊಲೀಸರು ಹೊರಹಾಕಿದ್ದಾರೆ. ಮುಂಡಗೋಡದ ಕೆಲ ರೌಡಿಗಳು ಧಾರವಾಡದಲ್ಲಿ ಅಶಾಂತಿಗೆ ಕಾರಣರಾಗಿರುವದು ಫೈರೋಜ್ ಕೊಲೆಯಲ್ಲಿ ಸಾಬೀತಾಗಿದೆ.
ಅಪರಾಧ ಹಿನ್ನೆಲೆ ಹೊಂದಿದವರು ರಿಯಲ್ ಎಸ್ಟೇಟ್ ಗೆ ಎಂಟ್ರಿ ಕೊಟ್ಟ ಮೇಲೆ ಅವರ ಖದರೇ ಬೇರೆಯಾಗಿದೆ. ಖಾದಿ ಅಷ್ಟೇ ಅಲ್ಲಾ, ಖಾಕಿ ಸಹ ಜೋಬಿನಲ್ಲಿದೆ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ.
ಸಣ್ಣ ಪುಟ್ಟ ಹೊಡೆದಾಟದಲ್ಲಿ ಭಾಗವಹಿಸಿ, ರೌಡಿ ಲಿಸ್ಟ್ ಗೆ ಪ್ರಮೋಷನ್ ಪಡೆದವರ ಕೈಗೆ ಗರಿ ಗರಿ ನೋಟುಗಳು ಬರುತ್ತಿದ್ದಂತೆ ಕ್ರೈಮ್ ಲೋಕ ಧಾರವಾಡದಲ್ಲಿ ಚಿಗುರಿಕೊಂಡಿದೆ.
ಧಾರವಾಡ ನಗರ ವೇಗವಾಗಿ ಬೆಳೆಯುತ್ತಿದ್ದು, ನಾಲ್ಕು ದಿಕ್ಕಿಗೂ ವಿಸ್ತಾರಗೊಳ್ಳುತ್ತಿದೆ. ಧಾರವಾಡದ ಉಪನಗರ, ವಿದ್ಯಾಗಿರಿ, ಶಹರ ಠಾಣೆಗಳ ಜೊತೆ ಮತ್ತೊಂದು ಪೊಲೀಸ್ ಠಾಣೆಯ ಅವಶ್ಯಕತೆ ಇದೆ.
ಈಗಿರುವ ಮೂರು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದ್ದ ಸಿಬ್ಬಂದಿಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತಿದೆ.
ಧಾರವಾಡದಲ್ಲಿ ಗಾಂಜಾ ಹಾವಳಿ ಮೀತಿ ಮೀರಿದ್ದು, ಅದನ್ನು ಬಗ್ಗು ಬಡಿಯಬೇಕಾಗಿದೆ. ಎಲ್ಲೆಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಅನ್ನೋದು ಕೆಲ ಸಿಬ್ಬಂದಿಗೂ ಗೊತ್ತಿದೆ. ಕ್ರೈಮ್ ಕಂಟ್ರೋಲ್ ಮಾಡಬೇಕಾದರೆ, ಪೊಲೀಸರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಿದೆ




