ಧಾರವಾಡದಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬನಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾದ ಘಟನೆ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿ, ಹುಬ್ಬಳ್ಳಿ ಕಿಮ್ಸ್ಗೆ ದಾಖಲಾಗಿದ್ದಾನೆ. ಈ ಘಟನೆ ಧಾರವಾಡದ ಹಾವೇರಿಪೇಟ ಬಡಾವಣೆಯಲ್ಲಿ ನಡೆದಿದೆ.
ಮೊಹ್ಮದ್ ರಫೀಕ್ (35) ಎಂಬಾತನೇ ಚಾಕು ದಾಳಿಗೆ ಒಳಗಾಗಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದೆ.ಸಾವು ಬದುಕಿನ ಮದ್ಯೆ ಆತ ಹೋರಾಟ ಮಾಡುತ್ತಿದ್ದಾನೆ.
ಮೊಹ್ಮದ್ ರಫೀಕ್ ಎಂದಿನಂತೆ ಸೆಂಟ್ರಿಂಗ್ ಕೆಲಸಕ್ಕೆ ಹೊರಟಿದ್ದ ಎನ್ನಲಾಗಿದೆ. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ದುಷ್ಕರ್ಮಿಗಳು ಈತನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ.
ಇದರಿಂದ ತೀವ್ರವಾಗಿ ಗಾಯಗೊಂಡ ಮೊಹ್ಮದ್ ರಫೀಕ್ ತಾನೇ ಮನೆಗೆ ಬಂದು ವಸ್ತ್ರದಿಂದ ತನ್ನ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಬೈಕ್ ತೆಗೆದುಕೊಂಡು ಆಸ್ಪತ್ರೆಗೆ ಹೊರಟಿದ್ದ.
ತೀವ್ರ ರಕ್ತಸ್ರಾವವಾದ ಹಿನ್ನೆಲೆ ಮಾರ್ಗ ಮಧ್ಯೆಯೇ ಅಂದರೆ ನವನಗರದ ಬಳಿ ಪ್ರಜ್ಞೆ ತಪ್ಪಿ ಮೊಹ್ಮದ್ ರಫೀಕ್ ಬಿದ್ದಿದ್ದಾನೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಈ ಮಾಹಿತಿ ತಿಳಿಸಿದ್ದರಿಂದ ಸ್ಥಳಕ್ಕೆ ಬಂದ ನವನಗರ ಠಾಣೆ ಪೊಲೀಸರು ಗಾಯಾಳುವನ್ನು ಕಿಮ್ಸ್ಗೆ ದಾಖಲಿಸಿದ್ದಾರೆ.
ಇಷ್ಟಕ್ಕೂ ಮೊಹ್ಮದ್ ರಫೀಕ್ ಮೇಲೆ ಚಾಕು ದಾಳಿ ನಡೆಸಿದವರು ಯಾರು? ಯಾವ ಕಾರಣಕ್ಕೋಸ್ಕರ ಈ ದಾಳಿ ನಡೆದಿದೆ ಎಂಬುದು ಇನ್ನೂ ಗೊತ್ತಾಗಿಲ್ಲ.





