ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಇಂದು ಧಾರವಾಡ ಪಾಲಿಕೆ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಬಂದಿದ್ದ ಶಾಸಕ ವಿನಯ ಕುಲಕರ್ಣಿಯವರು, ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳದೆ, ಜನರ ನಡುವೆ ಹೋಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ : 35 ಕೋಟಿ ಹಣ ತಂದಿದ್ದೆ, ತಡೆಯೂಡ್ಡಿದ್ದಕ್ಕೆ ಬೇಸರ
ಪಕ್ಷ ರಾಜಕಾರಣ ಪಕ್ಕಕ್ಕೆ ಸರಿಸಿ, ಧಾರವಾಡ ನಗರದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದ ಅವರು, ರಾಜಕಾರಣ ಮಾಡುವದು ಬೇಡ ಎಂದು ವಿನಂತಿಸಿದರು.
ಧಾರವಾಡದಿಂದ ಸವದತ್ತಿವರೆಗೆ ಕುಡಿಯುವ ನೀರು ಸರಬರಾಜು ಮಾಡುವ ಪೈಪುಗಳು ಒಡೆದು ನೀರು ಸೋರಿಕೆಯಾಗುತ್ತಿದೆ.
ಧಾರವಾಡದಿಂದ ಅಮ್ಮಿನಭಾವಿ ವರೆಗೆ ಪೈಪ್ ಲೈನ್ ಅಳವಡಿಸಲು 35 ಕೋಟಿ ಹಣವನ್ನು ಒಂದು ವರ್ಷದ ಹಿಂದೆಯೇ ತಂದಿದ್ದೆ, ಅದಕ್ಕೆ ಪಾಲಿಕೆ ಸಭೆಯಲ್ಲಿ ತಡೆಯೊಡ್ಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ವಿನಯ ಕುಲಕರ್ಣಿ ಹೆಸರು ಬರುತ್ತದೆ ಎಂದು ಬಿಜೆಪಿ ರಾಜಕಾರಣ ಮಾಡುತ್ತಿದೆ. ನನ್ನನ್ನು ರಾಜಕೀಯವಾಗಿ ವಿರೋಧಿಸಿ ಆದರೆ ಜನರಿಗೆ ತೊಂದರೆ ಕೊಡಬೇಡಿ ಎಂದು ಕಿವಿಮಾತು ಹೇಳಿದರು.
ಜನನ ಮರಣ ಪ್ರಮಾಣಪತ್ರ ಕೊಡುವ ಕಾರ್ಯ ನಾಳೆಯಿಂದ ಧಾರವಾಡದಲ್ಲಿಯೇ ಆರಂಭ ಮಾಡಿ
ಪಾಲಿಕೆಯಲ್ಲಿ ಕೆಲಸ ಆಗಬೇಕು ಎಂದರೆ ಪ್ರತಿಯೊಂದಕ್ಕೂ ಹುಬ್ಬಳ್ಳಿಗೆ ಹೋಗಬೇಕು. ಇದರಿಂದಾಗಿ ಧಾರವಾಡದ ಜನರಿಗೆ ತೊಂದರೆಯಾಗುತ್ತಿದೆ.
ಜನನ ಮರಣ ಪ್ರಮಾಣ ಪತ್ರ ಕೊಡುವದು ಮತ್ತು ತಿದ್ದುಪಡಿ ಮಾಡುವ ಕಾರ್ಯ ಧಾರವಾಡ ಪಾಲಿಕೆ ಕಚೇರಿಯಿಂದಲೇ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ನಾಳೆಯಿಂದ ಜನನ ಮರಣ ಪ್ರಮಾಣ ಪತ್ರ ಧಾರವಾಡದಲ್ಲಿ ಸಿಗುವಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದರು.
ನಾಲ್ಕು ದಿನಗಳಲ್ಲಿ ಧಾರವಾಡದಲ್ಲಿ ಸ್ವಚ್ಛತೆ ಕಾಣಿಸಿಕೊಳ್ಳಬೇಕು
ಅಧಿಕಾರಿಗಳಿಂದ ಅಭಿವೃದ್ದಿ ಕಾಮಗಾರಿ ಬಗ್ಗೆ ತಿಳಿದುಕೊಂಡ ಶಾಸಕ ವಿನಯ ಕುಲಕರ್ಣಿ, ನಾಲ್ಕು ದಿನಗಳಲ್ಲಿ ಒಳಚರಂಡಿ ದುರಸ್ತಿ, ಬೀದಿ ದೀಪಗಳ ಅಳವಡಿಕೆ ಮತ್ತು ನಗರದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಬರುವ ದಿನಗಳಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವದಾಗಿ ಹೇಳಿದರು.
ಕೆಲಸ ಮಾಡಲು ಮನಸ್ಸಿಲ್ಲದವರು ಜಾಗ ಖಾಲಿ ಮಾಡಿ
ಪಾಲಿಕೆಗೆ ಬರುವ ಜನರ ಸಮಸ್ಯೆ ಆಲಿಸಲು ಆಗದವರು, ಕೆಲಸ ಮಾಡಲು ಮನಸ್ಸಿಲ್ಲದವರು ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗುವಂತೆ ವಿನಯ ಕುಲಕರ್ಣಿ ಹೇಳಿದರು. ನಾನು ಇನ್ಮುಂದೆ ಪ್ರತಿ ವಾರ್ಡ್ ನಲ್ಲಿ ಸಂಚರಿಸುತ್ತೇನೆ, ಯಾವ ಲೋಪ ಆಗದಂತೆ ಕೆಲಸ ಮಾಡಬೇಕು ಎಂದು ಹೇಳಿದರು.
211 ಕಿಲೋಮೀಟರ್ ಪೈಪ್ ಹಾಕಲಾಗಿದೆ. ಲಿಂಕ್ ಮಾಡಿದ್ದು ಕೇವಲ 70 ಕಿಲೋಮೀಟರ್ ಮಾತ್ರ
ಧಾರವಾಡದ 1 ರಿಂದ 9 ನೇ ವಾರ್ಡನಲ್ಲಿ 211 ಕಿಲೋಮೀಟರ್ ಪೈಪಲೈನ್ ಅಳವಡಿಕೆ ಮಾಡಿದ್ದು, ಇಲ್ಲಿಯವರೆಗೆ 70 ಕಿಲೋಮೀಟರ್ ವರೆಗೆ ಜೋಡಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲಸ ಭರದಿಂದ ಸಾಗಿದ್ದು, ನವೆಂಬರ ಹೊತ್ತಿಗೆ ಕೆಲಸ ಮುಗಿಸುವದಾಗಿ ಅಧಿಕಾರಿ ಸವಿತಾ ಸಭೆಗೆ ತಿಳಿಸಿದರು.
ಸುಮಾರು ಎರಡು ತಾಸುಗಳ ವರೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ವಿನಯ ಕುಲಕರ್ಣಿಯವರು ಪ್ರತಿಯೊಂದು ವಿಷಯದ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಪರಿಹಾರ ಸೂಚಿಸಿದರು.
ಜಿಲ್ಲಾ ಮಟ್ಟದ ಕೆಡಿಪಿ ಸಭೆಗಿಂತಲೂ, ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅರ್ಥಪೂರ್ಣವಾಗಿತ್ತು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು.





