ಧಾರವಾಡ, ಜು. 17: ಧಾರವಾಡ ನಗರದ ರಂಕಾ ಅಪಾರ್ಟಮೆಂಟ್ನಲ್ಲಿ ನಡೆದ ವೈದ್ಯರ ಕೊಲೆ ಪ್ರಕರಣ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ. ವೈದ್ಯರಾದ ಡಾ. ಕಿರಣ ಅವರು ತಮ್ಮ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪತ್ನಿ ಡಾ. ಪ್ರಿಯಾಂಕಾ ವಿರುದ್ಧ ಆರೋಪ ಕೇಳಿಬಂದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಈ ದುರ್ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಮತ್ತು ಬರುವ ಔಷದಿ ಕೊಟ್ಟು, ಪ್ರಜ್ಞೆ ತಪ್ಪಿದ ಮೇಲೆ ಚಾಕು ಇರಿದಿರುವ ಶಂಕೆ
ಡಾ. ಕಿರಣ ಅವರಿಗೆ ಮೊದಲು ಮತ್ತು ತರಿಸುವ ಔಷಧ (Anesthetics/Sedatives) ನೀಡಿ, ಅವರು ಪ್ರಜ್ಞೆ ತಪ್ಪಿದ ಬಳಿಕ ಹತ್ಯೆ ಮಾಡಿರುವ ಸಾಧ್ಯತೆಯ ಬಗ್ಗೆ ತನಿಖಾಧಿಕಾರಿಗಳು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಡಾ. ಕಿರಣ ಅವರು ದಾಡಸಿ ಶರೀರ ಹೊಂದಿದ್ದರು. ಪ್ರಜ್ಞೆ ಇರುವಾಗಲೇ ಈ ಘಟನೆ ನಡೆದಿದ್ದರೆ, ವೈದ್ಯ ಕಿರಣ ತಪ್ಪಿಸಿಕೊಳ್ಳುತ್ತಿದ್ದರು. ಮಲಗಿದ್ದ ಸಂದರ್ಭದಲ್ಲಿ ಮೋಸ ಆಗಿರಬಹುದು ಎಂದು ಅವರ ಕುಟುಂಬದ ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ.
ಕಿರಣ ಅವರ ಸಾವಿನ ಸುದ್ದಿ ವೈದ್ಯಕೀಯ ವಲಯ ಸೇರಿದಂತೆ ಸಾರ್ವಜನಿಕರಲ್ಲಿ ಆಘಾತ ಉಂಟುಮಾಡಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮ ಸಂಕೇಶ್ವರ ಬಳಿಯ ಹೆಬ್ಬಾಳಕ್ಕೆ ಕೊಂಡೋಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿನ ಬಗ್ಗೆ ನಿಖರ ಕಾರಣ ಸ್ಪಷ್ಟವಾಗಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಕೌಟುಂಬಿಕ ಕಲಹ, ವೈಯಕ್ತಿಕ ಭಿನ್ನಾಭಿಪ್ರಾಯ ಸೇರಿದಂತೆ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ನಂತರವೇ ಘಟನೆಯ ನಿಖರ ಹಿನ್ನೆಲೆ ಮತ್ತು ಸತ್ಯಾಂಶ ಬಹಿರಂಗವಾಗುವ ನಿರೀಕ್ಷೆಯಿದೆ.





