ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಶಕ್ತಿ ನೀಡಿದ ಧಾರವಾಡ ಜಿಲ್ಲೆಯ ಬಿಜೆಪಿಯಲ್ಲಿ ಬಿ ವೈ ವಿಜಯೇಂದ್ರ ನೇಮಕದ ಬಳಿಕ ರಣೋತ್ಸಾಹ ಕಂಡು ಬರುತ್ತಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕಗೊಂಡ ನಂತರ ಬಿಜೆಪಿಯಲ್ಲಿ ಮಂಕು ಕವಿದ ವಾತಾವರಣ ನಿರ್ಮಾಣವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡ ಬಿ ವೈ ವಿಜಯೇಂದ್ರರಿಗೆ ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅಭಿನಂದಿಸುವ ಗೋಜಿಗೆ ಹೋಗದಿರುವದು ಬಿಜೆಪಿ ವಲಯದಲ್ಲಿ ಸೋಜಿಗ ಮೂಡಿಸಿದೆ.
ಬಣ ರಾಜಕೀಯನೋ, ಆಂತರಿಕ ಭಿನ್ನಮತವೋ
ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಅದರಲ್ಲಿಯೂ, ರಾಜ್ಯ ರಾಜಕೀಯದ ಎರಡನೇ ಶಕ್ತಿ ಕೇಂದ್ರ ಎಂದು ಹೆಸರಾದ ಹುಬ್ಬಳ್ಳಿಯಲ್ಲಂತೂ, ಹೆಜ್ಜೆ ಹೆಜ್ಜೆಗೂ ಬಿಜೆಪಿಯ ಸದ್ದು ಕೇಳಿ ಬರುತ್ತಿತ್ತು. ಪಕ್ಷದ ವರಿಷ್ಟ ನಾಯಕ ಬಿ ಎಲ್ ಸಂತೋಷ, ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ಪಕ್ಷದ ಕಾರ್ಯಕರ್ತರಿಗೆ ಇಂದಿಗೂ ಶಕ್ತಿ ತುಂಬುತ್ತಿದ್ದಾರೆ. ಆದರೆ ಮೊದಲಿನಂತೆ ಉತ್ಸಾಹ ಕಾರ್ಯಕರ್ತರಲ್ಲಿ ಕಂಡು ಬರುತ್ತಿಲ್ಲ ಎಂದು ಅದೇ ಪಕ್ಷದ ಎರಡನೇ ಸಾಲಿನ ಮುಖಂಡರು ಮಾತನಾಡಿಕೊಳ್ಳುತ್ತಿದ್ದಾರೆ. 2018 ರ ಚುನಾವಣೆಯಲ್ಲಿ 7 ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಶಾಸಕರಿದ್ದರು. ನವಲಗುಂದದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ, ಕಲಘಟಗಿಯಲ್ಲಿ ದಿವಂಗತ ಸಿ ಎಮ್ ನಿಂಬಣ್ಣವರ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಮೃತ ದೇಸಾಯಿ, ಹುಬ್ಬಳ್ಳಿ ಸೆಂಟ್ರಲ ಕ್ಷೇತ್ರದಲ್ಲಿ ಜಗದೀಶ ಶೆಟ್ಟರ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಅರವಿಂದ ಬೆಲ್ಲದ ಶಾಸಕರಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಮೊನ್ನೆ ನಡೆದ ಚುನಾವಣೆಯ ಸಂದರ್ಭದಲ್ಲಿ, ಬಿಜೆಪಿಯ ಕೇವಲ ಮೂವರು ಶಾಸಕರು ಆಯ್ಕೆಯಾಗಿದ್ದಾರೆ. ಸಂಘಟನಾತ್ಮಕ ಕೊರತೆ, ಬಣ ರಾಜಕೀಯ ಕಾರಣಕ್ಕೆ ಸೋಲಾಗಿದೆ ಎಂದು ಹೇಳಲಾಗುತ್ತಿದ್ದರು, ಬಿಜೆಪಿಯ ಬದಲು ಜಿಲ್ಲೆಯಲ್ಲಿ ಕಾಂಗ್ರೇಸ್ ಚೇತರಿಸಿಕೊಂಡಿದೆ.
ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕಗೊಂಡು ವಾರ ಕಳೆದರು, ವಿಜಯೇಂದ್ರರ ಒಂದೇ ಒಂದು ಬ್ಯಾನರ ಆಗಲಿ, ಪೋಸ್ಟರ ಆಗಲಿ ಹುಬ್ಬಳ್ಳಿಯಲ್ಲಿ ಕಂಡು ಬರುತ್ತಿಲ್ಲ. ಇದು ಬಣ ರಾಜಕೀಯವೋ, ಅಥವಾ ಆಂತರಿಕ ಭಿನ್ನಮತವೋ ಅನ್ನೋದು ಗೊಂದಲ ಮೂಡಿಸಿದೆ.





