ಸಾಕಷ್ಟು ಸಿರಿವಂತಿಕೆ ಇದ್ದರೂ ಅಧಿಕಾರದ ಆಸೆ ಪಡದೆ, ಜನಸೇವೆಯನ್ನೇ ಜೀವನದ ಧ್ಯೇಯವಾಗಿಸಿಕೊಂಡು, ಸಿರಿವಂತಿಕೆಯ ದೌಲತ್ತನ್ನು ಪ್ರದರ್ಶಿಸದೆ ಸಾಮಾನ್ಯರ ಸೌಲಭ್ಯಕ್ಕಾಗಿ ಶ್ರಮಿಸಿದ ಮಾಜಿ ಶಾಸಕ ಅಯ್ಯಪ್ಪ ಬಸಪ್ಪ (ಎ.ಬಿ.) ದೇಸಾಯಿ ಅವರ ಸರಳ ಹಾಗೂ ಸಾರ್ಥಕ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀಗುರು ಮಡಿವಾಳೆಶ್ವರ ಸಭಾಭವನದಲ್ಲಿ ಮಾಜಿ ಶಾಸಕ ಎ.ಬಿ. ದೇಸಾಯಿ ಅವರ 80ನೇ ಜನ್ಮದಿನದ ಅಂಗವಾಗಿ ನಡೆದ ಸಹಸ್ರ ಚಂದ್ರ ದರ್ಶನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಎ.ಬಿ. ದೇಸಾಯಿ ಅವರ ಜನಸೇವೆಯ ಪರಂಪರೆಯನ್ನು ಸ್ಮರಿಸಿದ ಸ್ವಾಮೀಜಿ, ಅವರ ಪುತ್ರ ಅಮೃತ ದೇಸಾಯಿ ಅವರು ಗರಗ ಮಠದ ಅಭಿವೃದ್ಧಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು.

ಉಪ್ಪಿನಬೆಟಗೇರಿ ಮೂರು ಸಾವಿರ ವಿರಕ್ತ ಮಠದ ಮನಿಪ್ರ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ಸರಳತೆ ಮತ್ತು ಸಜ್ಜನಿಕೆಗೆ ಹೆಸರಾದ ಅಯ್ಯಪ್ಪ ದೇಸಾಯಿ ಅವರದ್ದು ಆದರ್ಶಮಯ ಬದುಕು. ದೇಶಗತ್ತಿಯ ಮನೆತನಕ್ಕೆ ಸೇರಿದವರಾಗಿದ್ದರೂ ಜನಸಾಮಾನ್ಯರೊಂದಿಗೆ ಸಾಮಾನ್ಯರಂತೆ ಬೆರೆತು ಬದುಕಿದ ಅವರು, ಜನಾನುರಾಗಿಯಾಗುವ ಮೂಲಕ ಇಂದಿನ ಯುವಪೀಳಿಗೆ ಹಾಗೂ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.
ಮುರುಘಾ ಮಠದ ಮನಿಪ್ರ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜೀವನವನ್ನು ಸಾರ್ಥಕವಾಗಿ ಬದುಕಿದ ಮಹನೀಯರಲ್ಲಿ ಎ.ಬಿ. ದೇಸಾಯಿ ಅವರೂ ಒಬ್ಬರು ಎಂದು ಹೇಳಿದರು.
ಆತ್ಮಸಾಕ್ಷಿ ಹಾಗೂ ಮನಃಸಾಕ್ಷಿಗೆ ಅನುಗುಣವಾಗಿ ಆದರ್ಶ ಬದುಕು ನಡೆಸಿದ ಅವರು, ಜನರನ್ನು ಮೆಚ್ಚಿಸುವುದಕ್ಕಿಂತ ತಮ್ಮ ಮನಸ್ಸು ಮೆಚ್ಚುವ ರೀತಿಯಲ್ಲಿ ಬದುಕುವುದು ಮುಖ್ಯ ಎಂಬುದನ್ನು ತಮ್ಮ ಜೀವನದ ಮೂಲಕ ತೋರಿಸಿಕೊಟ್ಟಿದ್ದಾರೆ. ಎ.ಬಿ. ದೇಸಾಯಿ ಅವರು ಶತಾಯುಷಿಗಳಾಗಲಿ ಎಂದು ಹಾರೈಸಿದರು.
ಕಿರುಹೊತ್ತಿಗೆ, ಸಾಕ್ಷ್ಯಚಿತ್ರ ಬಿಡುಗಡೆ
ಎ.ಬಿ. ದೇಸಾಯಿ ಅವರ 80 ವರ್ಷಗಳ ಜೀವನ ಪಯಣವನ್ನು ಪರಿಚಯಿಸುವ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಅವರ ಜೀವನ ಹಾಗೂ ಜನಸೇವೆಯನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳು, ಅಭಿಮಾನಿಗಳು ಹಾಗೂ ಕುಟುಂಬಸ್ಥರಿಂದ ಗೌರವ-ಅಭಿನಂದನೆ ಸ್ವೀಕರಿಸಿದ ಅಯ್ಯಪ್ಪ ದೇಸಾಯಿ ಮಾತನಾಡಿ, ತಮ್ಮ ಜೀವನದಲ್ಲಿ ಮಾರ್ಗದರ್ಶನ ನೀಡಿದ ತಂದೆಯವರನ್ನೂ ಪೊಲೀಸ್ ಇಲಾಖೆಯ ವಿಶ್ವನಾಥ ಮಹಾಲೆಯವರನ್ನೂ ಸದಾ ಸ್ಮರಿಸುವುದಾಗಿ ಹೇಳಿದರು.
ಅಭಿಮಾನಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ತಮ್ಮ ಮೇಲೆ ತೋರಿದ ಪ್ರೀತಿ ಮತ್ತು ಗೌರವಕ್ಕೆ ತಾವು ಸದಾ ಚಿರಋಣಿಯಾಗಿರುವುದಾಗಿ ಅವರು ತಿಳಿಸಿದರು.
ಡಾ. ಶಶಿಧರ ತೋಡ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗರಗ ಮಡಿವಾಳೆಶ್ವರ ಮಠದ ಮನಿಪ್ರ ಆತ್ಮಾರಾಮ ಸ್ವಾಮೀಜಿ, ನರೇಂದ್ರ ಮೆಳೆಪ್ಪಜ್ಜನ ಮಠದ ಸಂಗಮೇಶ ದೇವರು, ರಾಚೋಟೇಶ್ವರ ಶಿವಾಚಾರ್ಯರು, ಯಶೋಧಮ್ಮ, ಅಶೋಕ ದೇಸಾಯಿ, ಎಸ್.ಆರ್. ದೇಸಾಯಿ, ಶಂಕರ ಮುಗದ, ಸಂತೋಷ ಬಡವಣ್ಣವರ ಸೇರಿದಂತೆ ಅನೇಕರು ಇದ್ದರು .
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಮಾಜಿ ಶಾಸಕ ಎ.ಬಿ.ದೇಸಾಯಿ ಅವರ 80ನೇ ಜನ್ಮ ದಿನದ ಅಂಗವಾಗಿ ಸಹಸ್ರ ಚಂದ್ರ ದರ್ಶನ ಅಭಿನಂದನಾ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಆಗಮಿಸಿ ಆಶೀರ್ವದಿಸಿದರು.




