ನೇಸರ, ತನ್ನ ಪಥವನ್ನು ಬದಲಿಸುತ್ತಿದ್ದಾನೆ. ಮಾಗಿಯ ಚಳಿ ಮಾಯವಾಗುತ್ತಿದೆ. ಸೂರ್ಯನು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಸಂಕ್ರಾಂತಿ ಹಬ್ಬದಂದೆ ರಾಜ್ಯ ಕಾಂಗ್ರೇಸ್ ಸರ್ಕಾರ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿದೆ.
ನಾಳೆ ಸಂಜೆ ವೇಳೆಗೆ ನಿಗಮ ಮಂಡಳಿಗೆ ಹೈಕಮಾಂಡನಿಂದ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಗೋಚರಿಸುತ್ತಿದೆ. ಧಾರವಾಡ ಜಿಲ್ಲೆಗೆ ಎರಡು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಕ್ಕಾ ಎನ್ನಲಾಗಿದೆ. ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ವಿನೋದ ಅಸೂಟಿ ಹೆಸರು ನಾಳೆ ಸಂಜೆ ವೇಳೆಗೆ ಘೋಷಣೆಯಾಗಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಟಿಕೇಟನಿಂದ ವಂಚಿತಗೊಂಡಿದ್ದ ವಿನೋದ ಅಸೂಟಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಎನ್ ಎಚ್ ಕೋನರೆಡ್ಡಿಯವರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

ಚುನಾವಣಾ ಪ್ರಚಾರದ ವೇಳೆ ಅಣ್ಣಿಗೇರಿಗೆ ಬಂದಿದ್ದ ರಾಜ್ಯ ಕಾಂಗ್ರೇಸ್ ಉಸ್ತುವಾರಿ ಸುರ್ಜೆವಾಲಾ ಹಾಗೂ ರಾಜ್ಯ ಯುವ ಕಾಂಗ್ರೇಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ, ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಟಿಕೇಟ್ ತ್ಯಾಗ ಮಾಡಿರುವ ವಿನೋದ ಅಸೂಟಿಯವರಿಗೆ ಮಹತ್ವದ ನಿಗಮ ಮಂಡಳಿ ಕೊಡುವದಾಗಿ ಹೇಳಿದ್ದರು. ಇದೀಗ ಸುರ್ಜೆವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಸೇರಿದಂತೆ ರಾಜ್ಯ ನಾಯಕರು ವಿನೋದ ಅಸೂಟಿ ಪರ ನಿಂತಿದ್ದಾರೆ.





